Tuesday, March 6, 2018

Verity 21 - ತೀರಿಹೋದ ಧಾರ್ಮಿಕ ಭಾವನೆಗಳು (Reader's response to an article)


ದಿನಾಂಕ ೯, ಆಗಸ್ಟ್ ೨೦೧೭, ವಿಶ್ವವಾಣಿ ಪತ್ರಿಕೆಯಲ್ಲಿನ 'ಮೌಢ್ಯ' ಎಂಬ ಲೇಖನಕ್ಕೆ  ನನ್ನ ಪ್ರತಿಕ್ರಿಯೆ.
(ಕೆಳಗಿನ ಲಿಂಕ್ ನಲ್ಲಿ ಮೌಢ್ಯ ಲೇಖನವಿದೆ)
http://epaper.vishwavani.news/bng/e/bng/09-08-2017/7
(ಕೆಳಗಿನ ಲಿಂಕ್ ನಲ್ಲಿ ನನ್ನ ಪ್ರತಿಕ್ರಿಯೆ)
http://epaper.vishwavani.news/bng/e/bng/11-08-2017/7

ಮೌಢ್ಯತೆ ಮೀರಿ

ತಮಗೆ ಸರಿ ಅಲ್ಲ ಅನಿಸಿದ್ದೆಲ್ಲವೂ ಮೌಢ್ಯ ಎನ್ನುವ ಈಗಿನ ಯುವ ಜನತೆಯ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ ಈ ಬುಧವಾರದ 'ಮೌಢ್ಯ' ಎಂಬ ಲೇಖನ .
ಹಿಂದಿನ ವಾರ ಟೀವಿ ನೋಡುತ್ತಿರುವಾಗ ಮಿಲನ ಎಂಬ ಚಲನ ಚಿತ್ರ ಪ್ರಸಾರವಾಗುತ್ತಿತ್ತು. ಒಬ್ಬ ಸ್ನೇಹಿತನಿಗೆ ಅವನ ಪ್ರೇಯಸಿಯನ್ನು ಕುಟುಂಬದ ವಿರೋಧದ ನಡುವೆಯೂ ವಿವಾಹ ಮಾಡಿಸುತ್ತಾನೆ ಹೀರೋ. ಹಾಗಂತ, ನಾವೆಲ್ಲರೂ ಅದನ್ನೇ ಮಾಡಬೇಕು ಎಂದುಕೊಳ್ಳುವುದು ಮೂರ್ಖತನ. 
ಟೀವಿಯಲ್ಲಿ ಜ್ಯೋತೀಷಿಗಳು ಏನೋ ಹೇಳುತ್ತಾ ಇದ್ದಾರೆ, ಅದನ್ನೇ ಆಚರಣೆ ಮಾಡಬೇಕು, ಇಲ್ಲಾಂದ್ರೆ ಕೇಸ್ ಹಾಕ್ತೀವಿ ಅಂತ ಯಾರಾದ್ರೂ ಹೇಳಿದ್ರಾ ಶರಧಿಯವರೇ? ಅದನ್ನು ಆಚರಿಸೋದು ಬಿಡೋದು ಅವರವರ ಇಷ್ಟ. ಕಷ್ಟ ಅನಿಸಿದರೆ ದಯವಿಟ್ಟು ನಿರ್ಲಕ್ಷಿಸಿ. 

ಧಾರ್ಮಿಕ ಆಚರಣೆಗಳ ಅಗತ್ಯವಿಲ್ಲದ ಜನರಿಗೆ ಎಲ್ಲವೂ ಒಂದು ತರಹ ಮೌಢ್ಯ. ಬೆಳಗ್ಗೆ ೬ ಗಂಟೆಗೆ ಸೂರ್ಯೋದಯವಾಗುತ್ತೆ, ಏಳು ಎಂದರೆ, ಸೂರ್ಯ ಅಲ್ಲೇ ಇರ್ತಾನೆ, ಭೂಮಿ ತಿರುಗಿದರೆ ನಾನೇನು ಮಾಡ್ಬೇಕಮ್ಮ, ೧೦ ಗಂಟೆ ತನಕ ಎಬ್ಬಿಸಬೇಡ ಎನ್ನೋ ಮಕ್ಕಳು ತಡ ರಾತ್ರಿ ೧ ಗಂಟೆಯವರೆಗೆ ಫೇಸಬುಕ್ನಲ್ಲೋ, ವಾಟ್ಸಾಪ್ಪ್ನಲ್ಲೂ ಬ್ಯುಸಿ ಆಗಿರೋದು ತಾಯಿಗೆ ಹೇಗೆ ತಿಳಿಯುತ್ತದೆ? ತಪ್ಪಲ್ಲ. ಅವರ ಜೀವನ, ಅವರ ಇಷ್ಟ. ಎಲ್ಲದಕ್ಕೂ ಪರಿಮಿತಿ ಇರಲೆಂದೇ ಈ ಸಂಸ್ಕಾರ ಮತ್ತು ಆಚರಣೆಯ ಅರಿವು ಅಗತ್ಯ. 

ಈಗಿನ ಕಾಲದಲ್ಲಿ, ಮನುಷ್ಯನ ಕೈಗೆ ಮೊಬೈಲ್ ಪ್ರಪಂಚ ಬಂದಿದೆ, ಜೇಬಲ್ಲಿ ಕಾಸು ಓಡಾಡುತ್ತ ಇದೆ. ಕೈಲೊಂದು ಕೆಲಸಾನೂ ಇದೆ. ಹೀಗಿರುವಾಗ ಧಾರ್ಮಿಕ ಆಚರಣೆಗಳಿಗೆ ಯಾರು ಸಮಯ ವ್ಯರ್ಥ ಮಾಡುತ್ತಾರೆ? ಅದೇ ನೆಪದಲ್ಲಿ, ಕಂಡಿದೆಲ್ಲ ಇವರಿಗೆ ಮೌಢ್ಯ. ಸಾವಿರಾರು ವರ್ಷಗಳ ಹಿಂದೆ ಅಪಾರ ಬುದ್ದಿಜೀವಿಗಳಾದ ಋಷಿಮುನಿಗಳು ಕಂಡು ಹಿಡಿದ ಜ್ಯೋತೀಷ್ಯ ಇವರಿಗೆ ಮೌಢ್ಯ! ಇಂತವರಿಗೆ ಬೆಳಗ್ಗೆ ಗುಡ್ ಮಾರ್ನಿಂಗ್ ಹೇಳಿದರೆ, ಊಟ ಆಯ್ತಾ ಅಂತ ಕೇಳಿದರೆ ಅದು ಮೌಢ್ಯ, ಯಾಕೆ ಆ ರೀತಿ ಹೇಳಿದರೆ ಮಾತ್ರ ಬೆಳಿಗ್ಗೆ ಆಗುತ್ತದೆಯೇ? ಅದೊಂದು ನೈಸರ್ಗಿಕ ಕ್ರಿಯೆ ಅಲ್ವಾ?  ಊಟ ನಾನು ತಿಂದಿಲ್ಲ ಅಂದ್ರೆ ನೀನು ಹಾಕ್ತೀಯ, ಇಲ್ಲ ತಾನೇ, ಮತ್ತೆ ಯಾಕೆ ಕೇಳೋದು? ಎಂದು ಕೇಳಿದಂತಿದೆ ನಿಮ್ಮ ಲೇಖನದ ಹರಿತ. 

ಮೊನ್ನೆ ಪಾಪ, ಧರ್ಮಸಿಂಗ್ ತೀರಿಕೊಂಡಾಗ ಸರ್ಕಾರ ಸಂತಾಪ ಸೂಚಕ ರಜೆ ಘೋಷಿಸಿದಾಗ ಎಲ್ಲಿ ಅಡಗಿತ್ತು ಈ ನಿಮ್ಮ ಮೌಢ್ಯ ವಿರೋಧಿ ಚಟುವಟಿಕೆ? ಸಾವು ನೈಸರ್ಗಿಕ ಕ್ರಿಯೆ ಅಲ್ವಾ? ಹಾಗೇ ಹಿಂದೆ ಹೋದರೆ, ಮಂತ್ರಿಯೊಬ್ಬರ ಪುತ್ರವಿಯೋಗದ ಶೋಕವೂ ಒಂದು ತರಹ ಮೌಢ್ಯ ಅಲ್ವಾ? ಪುತ್ರವಿಯೋಗದ ಶೋಕ ಹೆತ್ತವರಿಗಷ್ಟೇ ಗೊತ್ತು, ಈ ರೀತಿ ಹೇಳಿದಕ್ಕೆ ಕ್ಷಮೆ ಇರಲಿ. ಭಾವನೆಗಳು ಸತ್ತು ಹೋದಾಗ ಮಾತ್ರ ಈ ತರಹದ ಆಲೋಚನೆಗಳು ಸುಳಿಯುತ್ತವೆ. ಅವರವರ ಬುಡಕ್ಕೆ ಬಂದಾಗ ಮಾತ್ರ ಅದು ಬೆಂಕಿ, ಇಲ್ಲದೆ ಇದ್ರೆ ಅದು ಚಳಿ ಕಾಯಿಸಿಕೊಳ್ಳಲು, ಬೇಳೆ ಬೇಯಿಸಿಕೊಳ್ಳಲು ಇರುವ ನೈಸರ್ಗಿಕ ಆನಂದ. 

ಮೌಢ್ಯ, ಮೌಢ್ಯ ಎಂದು ನಿಮ್ಮ ಧಾರ್ಮಿಕ ಭಾವನೆಗಳನೂ ಮುಚ್ಚಿಹಾಕಿಕೊಳ್ಳಿ, ನೋ ಪ್ರಾಬ್ಲಮ್, ಆದರೆ ಬೇರೆಯವರ ಭಾವನೆಗಳ್ಳನ್ನು ಚುಚ್ಚದಿರಿ. 

No comments: